ನೂತನ ಕ್ಯಾಥಲ್ಯಾಬ್ ಸೌಲಭ್ಯದೊಂದಿಗೆ ಸೂಪರ್ ಸ್ಪೆಷಾಲಿಟಿ ಹೃದ್ರೋಗ ಚಿಕಿತ್ಸಾ ಘಟಕ ಲೋಕಾರ್ಪಣೆ ಮಾಡಿದ ಸಚಿವ ಎಚ್. ಕೆ. ಪಾಟೀಲ
ಗದಗ: ಫೆ.3: ಜಿಮ್ಸ್ ಆಸ್ಪತ್ರೆ ಸೇವೆಯಲ್ಲಿ ಶ್ರೇಷ್ಠ ಆಸ್ಪತ್ರೆ ಆಗಲಿ. ಇಲ್ಲಿ ಅತ್ಯುನ್ನತ ಸೇವೆಗಳು ಸರಳವಾಗಿ ಸಿಗಲಿ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಕೆ.ಪಾಟೀಲ ಅವರು ಹೇಳಿದರು.
ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆ ಆವರಣದಲ್ಲಿ ಸೋಮವಾರ ವೈದ್ಯಕೀಯ ಶಿಕ್ಷಣ ಇಲಾಖೆ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವತಿಯಿಂದ ನೂತನ ಕ್ಯಾಥಲ್ಯಾಬ್ ಸೌಲಭ್ಯದೊಂದಿಗೆ ಸೂಪರ್ ಸ್ಪೆಷಾಲಿಟಿ ಹೃದ್ರೋಗ ಚಿಕಿತ್ಸಾ ಘಟಕದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಜಿಮ್ಸ್ ಆರಂಬವಾಗಿ 10 ವರ್ಷ ಪೂರ್ಣಗೊಳಿಸಿದೆ. ಆದರೇ ಇಲ್ಲಿ ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಮಹತ್ವದ ಸಾಧನೆ ಮಾಡಿದ್ದೇವೆ. 185 ಕೋಟಿ ಕಾಲೇಜು ಕಟ್ಟಡ ನಿರ್ಮಾಣ ಆಗಿದೆ. ಒಟ್ಟಾರೆ 366 ಕೋಟಿ ಖರ್ಚು ಮಾಡಿದ್ದೇವೆ. 10 ಕೋಟಿ ವೆಚ್ಚದಲ್ಲಿ ಕ್ಯಾಥ್ ಲ್ಯಾಬ್ ಮಾಡಿದ್ದು, ಬಡವರಿಗೆ ಹೆಚ್ಚು ಅನುಕೂಲ ಆಗಲಿ ಎಂದರು.
ಗದಗನಲ್ಲಿ ಮಾನವ ಸಂಪನ್ಮೂಲ ಸಕಾಲಕ್ಕೆ ಸೇವೆ ಒದಗಿಸಲು ಮುಂದಾಗಬೇಕು. ನಾವು ಇಲ್ಲಿಂದ ಜಯದೇವ ಆಸ್ಪತ್ರೆ ಗೆ ಚಿಕಿತ್ಸೆ ಗೆ ಗದಗ ಜನರನ್ನು ಕರೆದುಕೊಂಡು ಹೋಗಿ ಬಂದಿದ್ದೇವೆ. ಅಲ್ಲಿನ ಮಾನವೀಯ ಸೇವೆ ಗೌರವ ಇಲ್ಲಿನ ಜಿಮ್ಸ್ ನಲ್ಲಿ ಲಭ್ಯವಾಗಬೇಕು ಎಂದು ಜಿಮ್ಸ್ ನಿರ್ದೇಶಕ ರಿಗೆ ಸೂಚನೆ ನೀಡಿದರು.
ಇಲ್ಲಿ ಬರುವವರಿಗೆ ಸಕಾಲದಲ್ಲಿ ಸೇವೆ ನೀಡಬೇಕು. ಬರುವರಿಗೆ ಗೌರವ, ಉತ್ತಮ ಗುಣಮಟ್ಟದ ಚಿಕಿತ್ಸೆ ಹಾಗೂ ಸೇವೆ ದೊರೆಯಲಿ ಎಂದು ಹೇಳಿದರು.
ಕರೋನಾ ವೇಳೆಯಲ್ಲಿ ದೇಶದಲ್ಲೇ ಗದಗ ವೈದ್ಯಕೀಯ ಸೇವೆ ಮರೆಯಲಾಗದು. ಜನಸಾಮಾನ್ಯರಿಗೆ ಉತ್ತಮ ಸೇವೆ ನೀಡುವಲ್ಲಿ ಮಹತ್ವದ ಸಾಧನೆ ಮಾಡಿದ್ದು ಅನನ್ಯೆಂದು ತಿಳಿಸಿದರು.
ಕರೋನಾ ಸಂದರ್ಭದಲ್ಲಿ ನಿಮ್ಮ ಗದಗ ಜಿಮ್ಸ ಸೇವೆ ಸದಾಕಾಲ ನೆನಪಿಡುವಂತದ್ದಾಗಿದೆ. ಜಿಮ್ಸ್ ನಿಂದಾಗಿ ಹಲವರು ಜೀವ ಉಳಿದಿದೆ ಎಂದರು.
ವಿಧಾನ ಪರಿಷತ್ ಶಾಸಕರಾದ ಎಸ್.ವಿ.ಸಂಕನೂರ ಮಾತನಾಡಿ, ಮೆಡಿಕಲ್ ಕಾಲೇಜು ಇತಿಹಾಸದಲ್ಲಿ ನೆನಪಿಡುವ ದಿನ ಇವತ್ತಿನದಿನ. ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆ ಅಧಿಕ ಆಗುತ್ತಿವೆ. ಜಗತ್ತಿನಲ್ಲಿ ಅತಿಹೆಚ್ಚಿನ ಜನ ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗಿ ಮೃತರಾಗುವರ ಸಂಖ್ಯೆ ಅತಿ ಅಧಿಕ ಭಾರತದಲ್ಲಿ ಎಂಬುದು ಕಳವಳ ಮೂಡಿಸಿದೆ. ಬಿಪಿಎಲ್ ಕಾರ್ಡುದಾರರಿಗೆ ಅತ್ಯಂತ ಕಡಿಮೆ ದರದಲ್ಲಿ ಚಿಕಿತ್ಸೆ ಲಬ್ಯ. ಇದನ್ನು ಈ ಭಾಗದ ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಿ ಎಂದರು. ಹೃದಯದ ಬಗ್ಗೆ ಕಾಳಜಿ ವಹಿಸುವ ಮೂಲಕ ಜಾಗೃತಿ ವಹಿಸಬೇಕು. ವೈದ್ಯರು ಜನರಿಗೆ ಅರಿವು ಮೂಡಿಸಬೇಕು ಎಂದರು.
ಜಿಮ್ಸ್ ನಿರ್ದೇಶಕರಾದ ಡಾ. ಬಸವರಾಜ ಪಿ ಬೊಮ್ಮನಹಳ್ಳಿ ಪ್ರಾಸ್ತಾವಿಕ ಮಾತನಾಡಿ, ೨೦೧೮ ರ ಆಯವ್ಯಯದಲ್ಲಿ ಕ್ಯಾಥ್ ಲ್ಯಾಬ್ ಘೋಷಣೆ ಆಯಿತು. ವರ್ಷದ ಹಿಂದೆ ಸಿಎಂ ಅವರು ಶಂಕುಸ್ಥಾಪನೆ ಮಾಡಿದ್ದರು. ಇಂದು ಉದ್ಘಾಟನೆ ಮಾಡುತ್ತಿರುವುದು ಸಂತಸ ತಂದಿದೆ. ಎಚ್. ಕೆ. ಪಾಟೀಲ ಅವರ ಕನಸಿನ ಕೂಸು ಈ ಕ್ಯಾಥ್ ಲ್ಯಾಬ್ ಎಂದರು.
ಹೃದಯ ಸಂಬಂಧಿ ಕಾಯಿಲೆಗೆ ಇಲ್ಲಿ ಉನ್ನತ ತಂತ್ರಜ್ಞಾನ ಹೊಂದಿದ ಯಂತ್ರಗಳಿದ್ದು, ಶಸ್ತ್ರಚಿಕಿತ್ಸೆ ಮಾಡಲು ಅವಕಾಶ ಇದೆ. ಹೃದಯದ ಕೆಲಸವನ್ನು ಹೃದಯದಿಂದ ಮಾಡು ಎಂಬ ಈ ವರ್ಷದ ಘೋಶ ವಾಕ್ಯವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದವರು ಸಚಿವರಾದ ಎಚ್. ಕೆ. ಪಾಟೀಲ ಅವರು ಎಂದು ಬಣ್ಣಿಸಿದರು.
ಜಿಮ್ಸ್ ಬಿ.ಎಸ್.ಇ ನರ್ಸಿಂಗ್ ವಿದ್ಯಾರ್ಥಿಗಳು ನಿಮ್ಮ ಹೃದಯ ನಿಮ್ಮ ಕೈಯಲ್ಲಿ ಎಂಬ ಕಿರುನಾಟಕ ಪ್ರದರ್ಶನ ಇದೇ ಸಂದರ್ಭದಲ್ಲಿ ಪ್ರದರ್ಶಿಸಿ, ನಾಟಕದಲ್ಲಿ ದೂಮಪಾನ, ಮದ್ಯಪಾನ, ಜಂಕ್ ಪುಡ್, ಗುಟಕಾ ಜಗಿಯುವದು ಆರೋಗ್ಯಕ್ಕೆ ಹಾನಿಕರ, ಇದರಿಂದ ನಿಮ್ಮ ಜೀವನವೇ ಸರ್ವನಾಶ ಆಗಬಹುದು ಎಂಬ ಸಂದೇಶ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಯಶಸ್ವೀಯಾಯಿತು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಡಿ ಆರ್ ಪಾಟೀಲ,
ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಅಕಬರ್ ಸಾಬ್ ಬಬರ್ಚಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಬಿಬಿ ಅಸೂಟಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಅಸುಂಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಲ್ತಾಫ್ ಕಾಗದಗಾರ, ಗ್ಯಾರಂಟಿ ತಾಲ್ಲೂಕು ಅಧ್ಯಕ್ಷ ಅಶೋಕ ಮಂದಾಲಿ, ಸಿದ್ದು ಪಾಟೀಲ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಜಿಮ್ಸ್ ವೈದ್ಯಕೀಯ ಅಧೀಕ್ಷಕರಾದ ಡಾ.ರೇಖಾ ಎಸ್ ಸೋನಾವನೆ, ಪ್ರಾಂಶುಪಾಲರಾದ ಡಾ. ರಾಜು ಜಿ ಎಮ್, ಆರ್ಥಿಕ ಸಲಹೆಗಾರರಾದ ಪ್ರಶಾಂತ ಜೆ.ಸಿ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಬಿ.ಸಿ.ಕರಿಗೌಡರ ಹಾಜರಿದ್ದರು.