ಗದಗ ನವೆಂಬರ್ 11: ತಾಯ್ನೆಲಕ್ಕಾಗಿ ಶೌರ್ಯದಿಂದ ಹೋರಾಡಿದ ವೀರವನಿತೆ ಒನಕೆ ಓಬವ್ವ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ. ಅವರು ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ದಲ್ಲಿ ಸೋಮವಾರ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಹಯೋಗದಲ್ಲಿ ಏರ್ಪಡಿಸಲಾದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕ ಇತಿಹಾಸವನ್ನು ಗಮನಿಸಿದಾಗ ದೇಶದ ರಕ್ಷಣೆಗಾಗಿ ಅನೇಕ ವೀರ ಮಹಿಳೆಯರು ತಮ್ಮ ಪ್ರಾಣವನ್ನು ಮುಡುಪಾಗಿಟ್ಟಿದ್ದನ್ನು ಸ್ಮರಿಸಬಹುದಾಗಿದೆ. ಅಂತಹ ವೀರ ಮಹಿಳೆಯರ ಸಾಲಿನಲ್ಲಿ ಒನಕೆ ಓಬವ್ವ ಸಹಿತ ವಿರಾಜಮಾನರಾಗಿದ್ದಾರೆ. ಒನಕೆ ಓಬವ್ವ ಅವರ ಸಾಹಸ ಎಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಗದಗ ಬೆಟಗೇರಿ ನಗರಸಭೆ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ ವೀರವನಿತೆ ಓಬವ್ವ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಉಪನ್ಯಾಸಕರಾಗಿ ಆಗಮಿಸಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಪ್ರಾಧ್ಯಾಪಕ ಡಾ. ವಿರೂಪಾಕ್ಷ ಮಾತನಾಡಿ, ಜಗತ್ತಿನಲ್ಲಿ ಮೂಡನಂಬಿಕೆ, ತಾರತಮ್ಯ ಹೋಗಲಾಡಿಸಿ ಸಮಾನತೆಗಾಗಿ ಹಾಗೂ ಅಭಿವೃದ್ಧಿಗಾಗಿ ಅನೇಕ ನೇತಾರರು, ಶರಣರು, ಮುಖಂಡರು ಶ್ರಮಿಸಿದ್ದಾರೆ. ಅದರಿಂದ ಸಾಮಾಜಿಕ, ತಂತ್ರಜ್ಞಾನ, ರಾಜಕೀಯ ಕ್ರಾಂತಿಗಳೂ ಸಹ ನಡೆದಿವೆ ಎಂದರು.
ಚಿತ್ರದುರ್ಗದ ನಾಯಕರ ಬಳಿ ಕಹಳೆಯವನಾಗಿ ಸೇವೆ ಸಲ್ಲಿಸುತ್ತಿದ್ದ ಮದ್ದಹನುಮಪ್ಪನ ಹೆಂಡತಿಯೇ ಓಬವ್ವ. ಹೈದರ್ ಅಲಿಯು ಚಿತ್ರದುರ್ಗ ಕೋಟೆಯನ್ನು ಅಕ್ರಮಿಸಲು ವಿಫಲನಾದನು. ನಂತರ ಹೈದರ್ ಅಲಿಯು ಕುಟಿಲ ಮಾರ್ಗದಿಂದ ಕೋಟೆಯನ್ನು ಬೇಧಿಸಲು ಗೂಢಚಾರರನ್ನು ನೇಮಿಸಿ ತಯಾರಿ ನಡೆಸಿದರು. ಮದ್ದಹನುಮಪ್ಪನು ಮಧ್ಯಾಹ್ನ ಮನೆಗೆ ಬಂದಾಗ ಓಬವ್ವಳು ಆತನಿಗೆ ಊಟಕ್ಕೆ ಬಡಿಸಿ ಕುಡಿಯುವ ನೀರು ತರಲು ಸಿಹಿ ನೀರಿನ ಕೊಳಕ್ಕೆ ನೀರು ತುಂಬಿಕೊಳ್ಳಲು ಬಂದಳು. ಕಳ್ಳಗಿಂಡಿಯ ಕಡೆಯಿಂದ ಶತ್ರುಗಳ ಅಸ್ಪಷ್ಟ ಮಾತುಗಳು , ಸುಳಿವು ಸಿಕ್ಕ ತಕ್ಷಣವೇ ಕಳ್ಳಗಿಂಡಿಯ ಬಳಿಗೆ ಶತ್ರುಗಳನ್ನು ಎದುರಿಸಲು ಸಿದ್ಧಳಾದರು. ಒನಕೆಯನ್ನು ಹಿಡಿದು ಒಬ್ಬೊಬ್ಬರಾಗಿ ನುಸುಳಿ ಬಂದವರ ತಲೆಗೆ ಒನಕೆ ಪೆಟ್ಟು ಕೊಟ್ಟು ಕೊಂದು ಹಾಕತೊಡಗಿದಳು. ಊಟ ಮುಗಿಸಿದ ಮದ್ದ ಹನುಮಪ್ಪನು ತನಗೆ ಕುಡಿಯುವ ನೀರು ತರಲು ಹೋದ ಓಬವ್ವಳನ್ನು ಕಾಣಲು ಕೊಳದ ಬಳಿಗೆ ಬಂದಾಗ ಅಲ್ಲಿಯ ಸನ್ನಿವೇಶವನ್ನು ನೋಡಿ ತನ್ನ ಕಹಳೆಯನ್ನು ಮೊಳಗಿಸಿದನು. ದುರ್ಗದ ಸೈನಿಕರು ಧಾವಿಸಿ ಬಂದು ಶತ್ರುಗಳನ್ನು ಹೊಡೆದೋಡಿಸಿದರು. ಹೀಗೆ ಶತ್ರುಗಳ ಕುಟಿಲ ಆಕ್ರಮಣವನ್ನು ತಡೆದು ಓಬವ್ವಳು ತನ್ನ ಸಮಯ ಪ್ರಜ್ಞೆ ಹಾಗೂ ಧೈರೈ ಶರ್ಯದಿಂದ ಮೆರೆದಿದ್ದು ಎಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದು ಇತಿಹಾಸ ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಹೆಚ್ಚುವರಿ ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಎಂ.ಬಿ.ಸಂಕದ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ಗದಗ ಬೆಟಗೇರಿ ನಗರಸಭೆ ಪೌರಾಯುಕ್ತ ಮಹೇಶ ಪೋತದಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯ ಸ್ವಾಮಿ ಬಿ, ವಾರ್ತಾಧಿಕಾರಿ ವಸಂತ ಮಡ್ಲೂರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಮುದಾಯದ ಮುಖಂಡರು, ಗಣ್ಯರು, ಹಾಜರಿದ್ದರು.
ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.