ಗದಗ ಜುಲೈ 10 : 2024-25ನೇ ಸಾಲಿನಲ್ಲಿ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು, ಗದಗ ಜಿಲ್ಲೆಯಲ್ಲಿ ಅನುಷ್ಟಾನಗೊಳಿಸಲು ಸರ್ಕಾರದ ಆದೇಶದಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕಿನ ದಾಳಿಂಬೆ, ಪಪ್ಪಾಯ ಹಾಗೂ ಮಾವು ಬೆಳೆಗಳನ್ನು ಬೆಳೆದ ರೈತರು ವಿಮಾ ಕಂತನ್ನು ಪಾವತಿಸಲು ಜುಲೈ 31 ಕೊನೆಯ ದಿನವಾಗಿದೆ.
ಬೆಳೆ ಸಾಲ ಪಡೆದ ರೈತರು ಸಂಬಂಧಿತ ಬ್ಯಾಂಕ್ ಗಳ ಮೂಲಕ ಹಾಗೂ ಬೆಳೆ ಸಾಲ ಪಡೆಯದ ರೈತರು ಬ್ಯಾಂಕ್ ಆನ್ಲೈನ್ ಮೂಲಕ ಅಥವಾ ಸಾಮಾನ್ಯ ಸೇವಾ ಕೇಂದ್ರ ಮೂಲಕ ಕೂಡಾ ಈ ಯೋಜನೆಯಡಿ ನೋಂದಾಯಿಸಬಹುದಾಗಿದೆ. ಬೆಳೆವಾರು ಪ್ರತಿ ಎಕರೆಗೆ ವಿಮಾ ಕಂತು ಮಾವು-1,600 ರೂ., ದಾಳಿಂಬೆ, 2540 ರೂ. ಹಾಗೂ ಪಪ್ಪಾಯ-2,680 ರೂ. ಗಳನ್ನು ನಿಗದಿಪಡಿಸಲಾಗಿರುತ್ತದೆ. ಪಹಣಿ ಪತ್ರಿಕೆ, ಬ್ಯಾಂಕ್ ಖಾತೆ ಪುಸ್ತಕದ ಪ್ರತಿ ಮತ್ತು ಆಧಾರ ಕಾರ್ಡನ ಪ್ರತಿ ಸೇರಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಶಿರಹಟ್ಟಿ ಅಥವಾ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.