ಗದಗ : 3 ದಿನಗಳ ಹಿಂದೆ ಗದಗ ಜಿಲ್ಲೆಯನ್ನೆ ಬೆಚ್ಚಿ ಬೀಳಿಸಿದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ 8 ಜನರನ್ನು ಬಂಧಿಸಲಾಗಿದೆ.
ನಗರಸಭೆ ಹಾಲಿ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ಗದಗ ನಗರದ ದಾಸರ ಓಣಿಯ ಮನೆಯಲ್ಲಿ ನಾಲ್ವರ ಕೊಲೆಯಾಗಿತ್ತು.
ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಕೊಲೆ ರಹಸ್ಯವನ್ನು ಭೇಧಿಸಿದ್ದು ಆಸ್ತಿ ವಿಚಾರಕ್ಕೆ ಪ್ರಕಾಶ್ ಬಾಕಳೆ ಅವರ ಹಿರಿಯ ಮಗ ವಿನಾಯಕ ಬಾಕಳೆ ಸುಫಾರಿ ಕೊಟ್ಟು ಹತ್ಯೆ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ. ಕೆಲ ದಿನಗಳ ಹಿಂದೆ ಅಪ್ಪ, ಮಗನ ಮಧ್ಯೆ ಆಸ್ತಿ ವಿಚಾರವಾಗಿ ಗಲಾಟೆ ನಡೆದಿತ್ತು. ಈ ಸಿಟ್ಟಿನಲ್ಲಿ ವಿನಾಯಕ ಬಾಕಳೆ ಫೈರೋಜ್ ಖಾಜಿ ಎಂಬುವವನಿಗೆ ಕೊಲೆ ಸುಫಾರಿ ಕೊಟ್ಟು 2 ಲಕ್ಷ ಮುಂಗಡವನ್ನು ಕೂಡ ನೀಡಿದ್ದ.
ಪ್ರಕರಣ?
ಶುಕ್ರವಾರ (ಏ.19) ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು ಮಲಗಿದ್ದ ಕಾರ್ತಿಕ ಬಾಕಳೆ ( 28), ಪರಶುರಾಮ ಹಾದಿಮನಿ (55), ಲಕ್ಷ್ಮಿ ಹಾದಿಮನಿ(45), ಆಕಾಂಕ್ಷಾ (16) ಎಂಬುವವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. 5 ತಂಡ ರಚಿಸಿ ಹಂತಕರ ಹಿಂದೆ ಬಿದ್ದ ಪೊಲೀಸರಿಗೆ ಮಗನೇ ಸುಫಾರಿ ನೀಡಿರುವ ಮಾಹಿತಿ ತಿಳಿದು ಬಂದಿದೆ.
ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ . ನೇಮಗೌಡ ನೇತೃತ್ವದಲ್ಲಿನ ಗದಗ ಹೆಚ್ಚುವರಿ ಎಸ್ಪಿ ಎಮ್ . ಬಿ . ಸಂಕದ , ಧಾರವಾಡ ಹೆಚ್ಚುವರಿ ಆಯುಕ್ತ ನಾರಾಯಣ ಬರಮನಿ , ಬಾಗಲಕೋಟ ಹೆಚ್ಚುವರಿ ಎಸ್ಪಿ ಹಾಗೂ ಗದಗ ಡಿವೈಎಸ್ಪಿ ಜೆ.ಎಚ್ . ಇನಾಮದಾರ ನೇತೃತ್ವದ ಪೊಲೀಸರ ತಂಡ ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ .
ಪ್ರಕರಣ ಸಂಬಂಧ ಫೈರೋಜ್ ಖಾಜಿ, ಜಿಶಾನ್ ಖಾಜಿ, ಕಾಂಟ್ರಾಕ್ಟ್ ಕಿಲ್ಲರ್ಸ್ ಸಾಹಿಲ್ ಖಾಜಿ, ಸೊಹೇಲ್ ಖಾಜಿ, ಸುಲ್ತಾನ್ ಶೇಖ್, ಮಹೇಶ್ ಸಾಳೊಂಕೆ, ವಾಹಿದ್ ಬೇಪಾರಿ ಎಂಬುವವರನ್ನು ಬಂಧಿಸಲಾಗಿದೆ. ಜೊತೆಗೆ ಪ್ರಕರಣವನ್ನು 72 ಗಂಟೆಯಲ್ಲಿ ಬೇಧಿಸಿದ ಎಸ್ಪಿ ಬಿ ಎಸ್ ನೇಮಗೌಡ ತಂಡಕ್ಕೆ ಡಿಜೆ, ಐಜಿಪಿ ಅಲೋಕ್ ಮೋಹನ್ ಅವರಿಂದ 5 ಲಕ್ಷ ರೂ ಬಹುಮಾನವನ್ನೂ ಘೋಷಣೆ ಮಾಡಲಾಗಿದೆ.
ಈ ಕುರಿತು ಉತ್ತರ ವಲಯದ ಐಜಿಪಿ ವಿಕಾಸ್ ಕುಮಾರ್ ವಿಕಾಸ ಅವರು , ಎಸ್ಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ .