ಹೊಳೆ ಆಲೂರು ಗ್ರಾಮದಲ್ಲಿ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ.
ರೋಣ : ಸ್ವಚ್ಚ ಭಾರತ ಮಿಷನ್ ನಡಿ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಚತೆಯ ಅರಿವು ಮೂಡಿಸುವ ಅಭಿಯಾನಕ್ಕೆ ರೋಣ ತಾಲೂಕಿನಲ್ಲಿ ಮತ್ತಷ್ಟು ವೇಗ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ರೋಣ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಚಂದ್ರಶೇಖರ ಬಿ. ಕಂದಕೂರ ಅವರು ಹೊಳೆ ಆಲೂರು ಗ್ರಾಮಕ್ಕೆ ಭೇಟಿ ನೀಡಿ ಸ್ವಚ್ಚತಾ ಅಭಿಯಾನದಲ್ಲಿ ಭಾಗವಹಿಸಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದರು.
ಹೊಳೆ ಆಲೂರ ಗ್ರಾಮದಲ್ಲಿನ ಅಂಗಡಿ–ಮುಂಗಟ್ಟುಗಳಿಗೆ ಭೇಟಿ ನೀಡಿ ಸ್ವಚ್ಚತೆಯನ್ನು ಪರಿಶೀಲಿಸಿದರು. ಸ್ವಚ್ಚತಾ ವಾಹನಗಳ ಮೂಲಕ ಕಸದ ಸರಿಯಾದ ಕಸ ವಿಲೇವಾರಿ ವಿಧಾನ, ಕುಡಿಯುವ ನೀರಿನ ಗುಣಮಟ್ಟದ ಕಾಪಾಡುವಿಕೆ ಹಾಗೂ ಪ್ಲಾಸ್ಟಿಕ್ ನಿಷೇಧದ ಬಗ್ಗೆ ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಅರಿವು ನೀಡಿದರು. “ಸ್ವಚ್ಚತೆಯು ನಮ್ಮ ಜವಾಬ್ದಾರಿ ಮಾತ್ರವಲ್ಲ, ಅದು ನಮ್ಮ ಆರೋಗ್ಯ ಮತ್ತು ಪರಿಸರದ ರಕ್ಷಣೆಗೆ ಮೂಲಭೂತ” ಎಂದು ಒತ್ತಿ ಹೇಳಿದ ಅವರು ಪ್ಲಾಸ್ಟಿಕ್ ಬದಲಿಗೆ ಕಾಗದದ ಚೀಲಗಳು ಹಾಗೂ ಬಟ್ಟೆಯ ಚೀಲಗಳ ಬಳಕೆಯನ್ನು ಉತ್ತೇಜಿಸುವಂತೆ ಗ್ರಾಮಸ್ಥರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು, ಅಂಗಡಿ ಮಾಲೀಕರು ಹಾಗೂ ಪಂಚಾಯತಿ ಸಿಬ್ಬಂದಿಗಳು ಸಕ್ರಿಯವಾಗಿ ಪಾಲ್ಗೊಂಡು ಕಸ ವಿಲೇವಾರಿಯ ವಿಧಾನಗಳನ್ನು ಪ್ರಾಯೋಗಿಕವಾಗಿ ಕಲಿತುಕೊಂಡರು. ಅಧಿಕಾರಿಗಳು ಕುಡಿಯುವ ನೀರಿನ ಮಾದರಿ ಪರೀಕ್ಷೆ ಹಾಗೂ ಶುದ್ಧತೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ವಿವರಿಸಿದರು. ಸ್ವಚ್ಚ ಭಾರತ ಮಿಷನ್ನಡಿ ಹೊಳೆ ಆಲೂರನ್ನು ಮಾದರಿ ಗ್ರಾಮವನ್ನಾಗಿ ರೂಪಿಸುವ ಸಂಕಲ್ಪವನ್ನು ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತಿ ಕಚೇರಿಗೆ ಭೇಟಿ ನೀಡಿದ ಅವರು ಸಾಮಾಜಿಕ ಲೆಕ್ಕ ಪರಿಶೋಧನೆ, ಸ್ಥಳೀಯ ಲೆಕ್ಕ ಪರಿಶೋಧನೆ, ಮನರೇಗಾ ಯೋಜನೆಯಡಿ ಉದ್ಯೋಗ ಸೃಷ್ಟಿ, ಸಿಬ್ಬಂದಿಗಳ ಹಾಜರಾತಿ ಸೇರಿದಂತೆ ವಿವಿಧ ವಿಷಯಗಳ ಪ್ರಗತಿಯನ್ನು ಪರಿಶೀಲಿಸಿದರು. ಈ ಮೂಲಕ ಪಂಚಾಯತಿ ಕಾರ್ಯವೈಖರಿಯನ್ನು ಪಾರದರ್ಶಕ ಗೊಳಿಸುವ ಜೊತೆಗೆ ಸ್ವಚ್ಚತಾ ಯೋಜನೆಗಳಲ್ಲಿ ಇರುವ ಲೋಪಗಳನ್ನು ಸರಿಪಡಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಬಸವರಾಜ್ ಗಿರಿತಮ್ಮನ್ನವರ ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು..