ಗದಗ ನ.೧ : ನಮ್ಮ ನಾಡಿನ ಹೆಮ್ಮೆಯ ಕನ್ನಡ ರಾಜ್ಯೋತ್ಸವ ಕನ್ನಡದ ಇತಿಹಾಸ, ಸಂಸ್ಕೃತಿ ಮತ್ತು ಅಸ್ಮಿತೆಯ ಸಂಕೇತದ ಜೊತೆಗೆ ಕನ್ನಡಿಗರ ಏಕತೆಯ ಶಕ್ತಿ ಎಂದು ರಾಜ್ಯದ ಕಾನೂನು, ನ್ಯಾಯ , ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರು ಡಾ.ಎಚ್.ಕೆ.ಪಾಟೀಲ ತಿಳಿಸಿದರು.
ಶನಿವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಜರುಗಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ದೇಶದ ಸ್ವಾತಂತ್ರ್ಯ ಚಳುವಳಿಯ ಜೊತೆಜೊತೆಗೆ ಕನ್ನಡಿಗರು ಒಂದೇ ಪ್ರದೇಶದಲ್ಲಿ ನೆಲೆಗೊಳ್ಳಲಿ ಎನ್ನುವ ಅಪೇಕ್ಷೆ ಮೊಳಗಿ “ಉದಯವಾಗಲಿ ನಮ್ಮ ಕನಸು ಕಂಡAತೆ “ ತಾಯೆ ಬಾರೆ ಮೊಗವ ತೋರೆ ಕನ್ನಡಿಗರ ಮಾತೆಯೇ, ಚಲುವ ಕನ್ನಡ ನಾಡು” ಎಂದು ಗದುಗಿನ ಹುಯಿಲಗೋಳ ನಾರಾಯಣರಾಯರು ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ”ಎಂದು ಕನ್ನಡಾಂಬೆಯನ್ನು ಆಹ್ವಾನಿಸಿ ಎಲ್ಲರನ್ನು ಏಕೀಕರಣಕ್ಕಾಗಿ ಒಗ್ಗೂಡುವಂತೆ ಅನೇಕ ಏಕೀಕರಣದ ಹೋರಾಟಗಾರರು ಹೋರಾಡಿದ ಫಲಶ್ರುತಿಯಾಗಿ ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರು ೧೯೫೬ ನವಂಬರ್ ೦೧ ರಂದು ವಿಶಾಲ ಮೈಸೂರು ರಾಜ್ಯವಾಗಿ ಉದಯವಾಯಿತು ಎಂದು ಹೇಳಿದರು.
ಆಲೂರು ವೆಂಕಟರಾಯರು, ಶಾಂತವೇರಿ ಗೋಪಾಲಗೌಡ, ಅಂದಾನಪ್ಪ ದೊಡ್ಡಮೇಟಿ, ದಿವಾಕರ ರಂಗನಾಥ್, ಕೆಂಗಲ್ ಹನುಮಂತಯ್ಯ, ಕೆ.ಎಚ್. ಪಾಟೀಲ ರಂತಹ ಹಲವಾರು ಕನ್ನಡಾಭಿಮಾನ ಹೊಂದಿದ ಮಹನೀಯರ ಪರಿಶ್ರಮದ ಫಲವಾಗಿ ಇಂದಿನ ಕರ್ನಾಟಕ ಉಚ್ಛಾಯ ಸ್ಥಿತಿಗೆ ಕಾರಣವಾಗಿದೆ. ಸ್ವಾತಂತ್ರ್ಯಾ ನಂತರ ಮೈಸೂರು ರಾಜ್ಯವು ಏಕೀಕರಣವಾದರೂ ಕರ್ನಾಟಕ ಎಂಬ ಹೆಸರು ನಾಮಕರಣವಾಗಲಿ ಎನ್ನುವ ಕೂಗು ಗದಗ ಸೇರಿದಂತೆ ಹಲವೆಡೆ ಪಸರಿಸಿತು. ಕರ್ನಾಟಕ ನಾಮಕರಣವಾಗಲು ಹಲವಾರು ಘಟನಾವಳಿಗಳು ಜರುಗಿದವು. ಇದಕ್ಕೆ ಪೂರಕವಾಗಿ ಗದುಗಿನ ಕಾಟನ್ ಸೇಲ್ ಸೊಸೈಟಿಯ ಆವರಣದಲ್ಲಿ ದಿನಾಂಕ: ೨೭, ೨೮ ಮತ್ತು ೨೯ರ ಡಿಸೆಂಬರ್ ೧೯೬೧ ರಲ್ಲಿ ಜರುಗಿದ ೪೩ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಕೆ.ಜಿ. ಕುಂದಣಗಾರ ಮತ್ತು ಸ್ವಾಗತ ಸಮಿತಿಯ ಅಧ್ಯಕ್ಷ ಕೆ.ಎಚ್. ಪಾಟೀಲ ಅವರ ಆಶಯದಂತೆ ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯವೆಂದು ನಾಮಕರಣವಾಗಲಿ ಎಂದು ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ವಿಧಾನಸಭೆಯಲ್ಲಿ ಮುಖ್ಯಮಂತ್ರಿ ದೇವರಾಜ ಅರಸು, ವಿಧಾನ ಪರಿಷತ್ತಿನಲ್ಲಿ ಕೃಷಿ ಸಚಿವ ಕೆ.ಎಚ್. ಪಾಟೀಲ ರಾಜ್ಯಕ್ಕೆ ಕರ್ನಾಟಕ ನಾಮಕರಣ ಠರಾವು ಮಂಡಿಸಿದರು. ಸರ್ವಾನುಮತದಿಂದ ಠರಾವು ಪಾಸಾಗಿ ೧೯೭೩ ನವಂಬರ್ ೦೧ ರಂದು ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ಎಂದು ನಾಮಕರಣವಾಯಿತು ಎಂದು ಹೇಳಿದರು.
ಕರ್ನಾಟಕ ನಾಮಕರಣ ಸಂಭ್ರಮಾಚರಣೆಯನ್ನು ಗದುಗಿನಲ್ಲಿ ೧೯೭೩ರ ನವಂಬರ್-೦೨ ರಂದು ಹಂಪಿಯ ವಿರುಪಾಕ್ಷೇಶ್ವರ ದೇವಾಲಯದಲ್ಲಿ ಪ್ರಜ್ವಲಿಸಿದ ಕನ್ನಡ ಜ್ಯೋತಿಯನ್ನು ಗದುಗಿನ ವೀರನಾರಾಯಣ ದೇವಸ್ಥಾನದಲ್ಲಿ ಸ್ವೀಕರಿಸಿದ ಮುಖ್ಯಮಂತ್ರಿ ದೇವರಾಜ ಅರಸ, ಹಾಗು ಸಚಿವರು, ಅಭಿಮಾನಿಗಳು ವೀರನಾರಾಯಣ ದೇವಸ್ಥಾನದಿಂದ ಕಾಟನ್ ಸೇಲ್ ಸೊಸೈಟಿಯವರೆಗೆ ಅಪಾರ ಕನ್ನಡಾಭಿಮಾನಿಗಳ ಮಧ್ಯೆ ಮೆರವಣಿಗೆ ಮೂಲಕ ಬಂದು ಕಾಟನ್ ಸೇಲ್ ಸೊಸೈಟಿಯ ಆವರಣದಲ್ಲಿ ಐತಿಹಾಸಿಕ ಸಭೆ ನಡೆಸಿ ಕರ್ನಾಟಕ ನಾಮಕರಣ ಮಹೋತ್ಸವವನ್ನು ಸಂಭ್ರಮಿಸಿದ್ದು ಕರ್ನಾಟಕ ಇತಿಹಾಸದಲ್ಲಿ ಅವಿಸ್ಮರಣೀಯ ಕ್ಷಣಗಳಾಗಿದ್ದು,ಅಂದು ಜರುಗಿದ ಕರ್ನಾಟಕ ನಾಮಕರಣ ಮಹೋತ್ಸವದ ಘಟನೆಗಳನ್ನು ಮರುಸೃಷ್ಟಿಸಿ, ಕರ್ನಾಟಕ ಸಂಭ್ರಮ-೫೦ರ ಸಂಭ್ರಮಾಚರಣೆಯನ್ನು ೨೦೨೩ರ ನವಂಬರ್ ೦೧, ೦೨ ಮತ್ತು ೦೩ ರಂದು ಕಾಟನ್ ಸೇಲ್ ಸೊಸೈಟಿಯ ಆವರಣದಲ್ಲಿ ಐತಿಹಾಸಿಕ ಕಾರ್ಯಕ್ರಮ ಜರುಗಿದ್ದು ನಾಡಿನ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ವಿಧಾನಸಭೆಯ ಅಧ್ಯಕ್ಷರಾದ ಯು.ಟಿ. ಖಾದರ್ ಪರೀದ, ವಿಧಾನ ಪರಿಷತ್ತಿನ ಸಭಾಧ್ಯಕ್ಷರಾದ ಬಸವರಾಜ ಹೊರಟ್ಟಿ, ಸಚಿವ ಸಂಪುಟದ ೨೦ಕ್ಕೂ ಹೆಚ್ಚು ಸಚಿವರು ಹಾಗೂ ಶಾಸಕರು, ಕರ್ನಾಟಕ ಸಂಭ್ರಮ-೫೦ರ ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕರ್ನಾಟಕ ನಾಮಕರಣ ಮಹೋತ್ಸವ ಜರುಗಿತು ಎಂಧರು.
ನಮ್ಮ ಕನ್ನಡ ನಾಡು ಹಲವು ಜನಾಂಗಗಳು ಸಂಸ್ಕೃತಿಗಳು, ಧರ್ಮಗಳು, ಪಂಥಗಳು ಒಂದಾಗಿ ಬದುಕುತ್ತಿರುವ ಸೌಹಾರ್ದದ ನೆಲ. ಈ ನಾಡಿನ ಹೃದಯದಲ್ಲಿ ಸಮಾನತೆ, ಸಹಭಾವ, ಸಹಬಾಳ್ವೆ, ಬ್ರಾತೃತ್ವ ಭಾವನೆ ತುಂಬಿದೆ. ಶರಣರ ವಚನ, ದಾಸರ ಭಕ್ತಿ ಗೀತೆಗಳಿಂದ, ದ.ರಾ ಬೇಂದ್ರೆ, ಕುವೆಂಪು ವಿಶ್ವ ಮಾನವ ಸಂದೇಶದಿAದ ನಮ್ಮ ನಾಡು ಒಂದು ವಿಶಾಲ ಚಿಂತನೆಯ ಬೀಡಾಗಿದೆ. “ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ” ಎನ್ನುವ ಚಂಬೆಳಕಿನ ಕವಿ ಚನ್ನವೀರ ಕಣವಿಯವರ ಈ ಮಾತಿನ ಸ್ಫೂರ್ತಿಯಿಂದ ಕನ್ನಡ ನಾಡು, ಕನ್ನಡಿಗರು ಎಲ್ಲ ಕ್ಷೇತ್ರಗಳಲ್ಲಿಯೂ ಅಪರಿಮಿತ ಸಾಧನೆಗೈದಿದ್ದಾರೆ ಎಂದು ಹೇಳಿದರು.
ಗದುಗಿನ ವೀರನಾರಾಯಣ-ತ್ರಿಕೂಟೇಶ್ವರ ದೇವಾಲಯಗಳು, ಲಕ್ಕುಂಡಿ ಜಿನಾಲಯಗಳು, ಡಂಬಳದ ದೊಡ್ಡ ಬಸವೇಶ್ವರ ದೇವಾಲಯ ಸೂಡಿಯ ಜೋಡು ಕಳಸದ ದೇವಾಲಯ, ದಾನ ಚಿಂತಾಮಣಿ ಅತ್ತಿಮಬ್ಬೆ ಸ್ಮಾರಕಗಳ ಶಿಲ್ಪಕಲೆ ಮೈ-ಮನಗಳನ್ನು ಮುದಗೊಳಿಸುತ್ತದೆ ಮತ್ತು ಭಾರತ ರತ್ನ, ಸಂಗೀತ ಸಾಮ್ರಾಟ ಪಂಡಿತ ಭೀಮಸೇನ ಜೋಶಿ, ಪಂಡಿತ್ ಪುಟ್ಟರಾಜ ಗವಾಯಿಗಳವರ ಆಶ್ರಮದ ಸಂಗೀತ ನಿನಾದ ನಮ್ಮಲ್ಲಿ ಧನ್ಯತಾ ಭಾವವನ್ನು ಜಾಗೃತಗೊಳಿಸುತ್ತದೆ.
ಗದಗಿನ ಕೀರ್ತಿಯನ್ನು ರಾಷ್ಟ್ರ ಮಟ್ಟಕ್ಕೇರಿಸಿದ, ಶ್ರೀಮಂತಗೊಳಿಸಿದ ೧ನೇಯ ನಾಗವರ್ಮ, ಶಾಸನ ಕವಿ ಮಲ್ಲ, ದುರ್ಗಸಿಂಹ, ನಯಸೇನ, ಚಾಮರಸ, ಕುಮಾರವ್ಯಾಸ, ಶ್ರೀಧರಾಚಾರ್ಯ, ಆದಯ್ಯ, ಬಾಲಲೀಲಾ ಮಹಾಂತ ಶಿವಯೋಗಿಗಳು, ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರು, ಹುಯಿಲಗೋಳ ನಾರಾಯಣರಾಯರು, ಹಿಂದೂಸ್ಥಾನಿ ಗಾಯಕ ಭಾರತ ರತ್ನ ಪುರಸ್ಕೃತ ಪಂಡಿತ್ ಭೀಮಸೇನ ಜೋಶಿಯವರು, ಸಂಗೀತ ದಿಗ್ಗಜರಾದ ಪಂಚಾಕ್ಷರಿ ಗವಾಯಿಗಳು ಮತ್ತು ವಿಕಲಚೇತನರ ಬಾಳಿನ ಬೆಳಕಾದ ಡಾ.ಪುಟ್ಟರಾಜ ಗವಾಯಿಗಳು,ಸೇರಿದಂತೆ ಅನೇಕರನ್ನು ಸ್ಮರಿಸೋಣ ಎಂದರು.
ಕ್ರೀಡಾ ಕ್ಷೇತ್ರದಲ್ಲಿ ಕ್ರಿಕೆಟಿಗ ಸುನೀಲ ಜೋಶಿ, ಕುಸ್ತಿ ಪಟು ಪ್ರೇಮಾ ಹುಚ್ಚಣ್ಣವರ, ಹಾಕಿ ಪಟುಗಳಾದ ಭೀನೂ ಭಾಟ್, ರಾಜು ಬಾಗಡೆ, ಹರೀಶ ಮುಟಗಾರ, ಇತ್ತೀಚೆಗೆ ಸಪಿರ್ಂಗ್ ಕ್ರೀಡೆಯಲ್ಲಿ ಏಷ್ಯಾ ಮಟ್ಟದಲ್ಲಿ ಕಂಚಿನ ಪದಕ ಪಡೆದ ಮುಂಡರಗಿ ತಾಲೂಕಿನ ಮುರುಡಿ ತಾಂಡೆಯ ರಮೇಶ ಬೂದಿಹಾಳ ಹೀಗೆ ಅನೇಕ ಸಾಧಕರು ಗದಗಿನ ಹೆಮ್ಮೆಯಾಗಿದ್ದಾರೆ.ಇಂದು ನಮ್ಮ ರಾಜ್ಯವು ಶಿಕ್ಷಣದಲ್ಲಿ, ತಂತ್ರಜ್ಞಾನದಲ್ಲಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ ಕನ್ನಡ ನಾಡು ಸಮೃದ್ಧವಾಗಲಿ, ಕನ್ನಡ ಭಾಷೆ ವಿಶ್ವದ ನಾನಾ ಮೂಲೆಗಳಲ್ಲಿ ಕಂಗೊಳಿಸಲಿ, ಕನ್ನಡಿಗರ ಜೀವನ ಸುಖಶಾಂತಿಯುತವಾಗಿರಲಿ, ಕನ್ನಡ ನಾಡು ಸರ್ವಜನಾಂಗದ ಶಾಂತಿಯ ತೋಟವಾಗಲಿ, ಚಲುವ ಕನ್ನಡ ನಾಡಿನ ಕನಸು ನನಸಾಗಲಿ, ಇದೇ ನನ್ನ ಅಂತರಾಳದ ಹಾರೈಕೆ.ನಮ್ಮ ಒಗ್ಗಟ್ಟಿನಿಂದ, ಜನಪರ ನಿಲುವುಗಳಿಂದ ಶ್ರಮದಿಂದ, ಪ್ರಗತಿಮಾರ್ಗದ ನಂಬಿಕೆಯಿAದ ಕರ್ನಾಟಕವು ವಿಶ್ವಕ್ಕೆ ಮಾದರಿ ರಾಜ್ಯವಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಆಶಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ,ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್.ಪಾಟೀಲ,ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಜಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ, ತಾಲೂಕಾ ಅಧ್ಯಕ್ಷ ಅಶೋಕ ಮಂದಾಲಿ, ಸಿದ್ದು ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ಎಸಿ ಗಂಗಪ್ಪ ಎಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರುಗಳು, ಸಾರ್ವಜನಿಕರು, ಅಪಾರ ಸಂಖ್ಯೆಯಲ್ಲಿ ಶಾಲಾ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.



