ಗದಗ :- ಭಾರತ ಚುನಾವಣಾ ಅಯೋಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಸಹ ಭಾಗಿತ್ವ ಸಮಿತಿ (ಸ್ವೀಪ್),ಹಿಂದುಳಿದ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ `ನಮ್ಮ ನಡೆ ಮತಗಟ್ಟೆ ಕಡೆಗೆ’ ಮತದಾನ ಜಾಗೃತಿ ಕಾರ್ಯಕ್ರಮವು ಮಂಗಳವಾರ ನಡೆಯಿತು.
ನಗರದ ಬೆಟಗೇರಿಯ ಅಂಬಾಭವಾನಿ ವೃತ್ತದಲ್ಲಿ ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್ ಹಾಗೂ ಜಿ.ಪಂ ಸಿಇಒ ಭರತ್.ಎಸ್ ಅವರು ಕಾಲ್ನಡಿಗೆ ಮತ್ತು ಬೈಕ್ ರ್ಯಾಲಿ ಗೆ ಚಾಲನೆ ನೀಡಿದರು.ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್ ಅವರು ಮಾತನಾಡಿ
ಕಳೆದ ಚುನಾವಣೆಯಲ್ಲಿ ಬೆಟಗೇರಿಯ ಭಾಗದಲ್ಲಿ ಕಡಿಮೆ ಮತದಾನ ವಾಗಿದ್ದು, ಈ ಪ್ರದೇಶಗಳಲ್ಲಿ ಈ ಬಾರಿ ನೂರಕ್ಕೆ ನೂರರಷ್ಟು ಮತದಾನವಾಗಬೇಕು. ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ತಮ್ಮ ಮತಗಟ್ಟೆ ಸಂಖ್ಯೆ, ಮತಗಟ್ಟೆ ಭಾಗದ ಕ್ರಮ ಸಂಖ್ಯೆ, ಮುಂತಾದ ಮಾಹಿತಿ ತಿಳಿದುಕೊಂಡು ಮತದಾನ ಕಡ್ಡಾಯವಾಗಿ ಮಾಡುವಂತಾಗಬೇಕು ಎಂದು ಕೋರಿದರು.
ಜಿ.ಪಂ ಸಿಇಒ ಭರತ್.ಎಸ್ ಅವರು ಮೇ.7 ರಂದು ಮತದಾನ ನಡೆಯಲಿದ್ದು,ಊರ ಜಾತ್ರೆಯ ರೀತಿ ಕುಟುಂಭ, ಸ್ನೇಹಿತರೊಂದಿಗೆ ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲರೂ ಮತದಾನ ಮಾಡುವಂತಾಗಬೇಕು. ಪ್ರತಿ ಮತವೂ ಸಹ ಅಮೂಲ್ಯವಾಗಿದೆ ಎಂದು ತಿಳಿಸಿದರು.
ಮತದಾನ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು. ಮತದಾನವನ್ನು ಹಬ್ಬದ ರೀತಿಯಲ್ಲಿ ಆಚರಿಸುವ ಮೂಲಕ ಪ್ರತಿಯೊಬ್ಬರೂ ಪಾಲ್ಗೋಳ್ಳಬೇಕು ಎಂದು ಹಿಂದುಳಿದ ಕಲ್ಯಾಣಾಧಿಕಾರಿ ರವಿ ಗುಂಜೀಕರ ತಿಳಿಸಿದರು.
ಜಾಥಾ ಕಾರ್ಯಕ್ರಮವು ಗದಗ ಬೆಟಗೇರಿಯ ಅಂಬಾಭವಾನಿ ವೃತ್ತದಿಂದ ಕುರಟ್ಟಿಪೇಟೆ, ಬಸ್ ನಿಲ್ದಾಣ ಮಂಜುನಾಥ ನಗರ, ಹುಯಿಲಗೋಳ ರಸ್ತೆ ಮಾರ್ಗವಾಗಿ ತಾರಾಲಯವನ್ನು ತಲುಪಿತು
ಈ ಜಾಥಾದಲ್ಲಿ ಬೈಕ್ ರ್ಯಾಲಿ ನಾನಾ ಕಲಾ ತಂಡಗಳಿಂದ ಕಲಾ ಪ್ರದರ್ಶನ, ವಿದ್ಯಾರ್ಥಿಗಳ ವೇಷಭೂಷಣಗಳ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.
ಜಿ.ಪಂ.ಉಪ ಕಾರ್ಯದರ್ಶಿ ಸಿ.ಬಿ.ದೇವರಮನಿ, ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ವಸತಿ ನಿಲಯದ ವಿದ್ಯಾರ್ಥಿಗಳು ಕಲಾ ತಂಡ ಇತರರು ಇದ್ದರು.