ಶಿರಹಟ್ಟಿ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಅಡಿಯಲ್ಲಿ ನೋಂದಾಯಿತ ಕುಟುಂಬಗಳ ಜಾಬ್ ಕಾರ್ಡ್ಗಳ ಇ-ಕೆವೈಸಿ ವ್ಯಾಲಿಡೇಶನ್ ಅನ್ನು ತುರ್ತಾಗಿ ಪೂರ್ಣಗೊಳಿಸಲು ಶಿರಹಟ್ಟಿ ತಾಲೂಕ ಪಂಚಾಯಿತಿಗಳ ಸಿಬ್ಬಂದಿಗಳಿಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ಸೂಚಿಸಿದ್ದಾರೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಆದೇಶದಂತೆ ಬೆಂಗಳೂರಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಸೂಚನೆಯಂತೆ ಶಿರಹಟ್ಟಿ ತಾಲ್ಲೂಕಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಕ್ರಿಯ ಕೂಲಿಕಾರರ ಜಾಬ್ ಕಾರ್ಡ್ ಅನ್ನು ಇ-ಕೆವೈಸಿ ಮುಖಾಂತರ ವ್ಯಾಲಿಡೇಟ್ ಮಾಡಲಾಗುತ್ತಿದೆ. ನರೇಗಾ ಯೋಜನೆಯ ಎಲ್ಲ ಗ್ರಾಪಂಗಳ ಸಕ್ರಿಯ ಕುಟುಂಬಗಳ ಜಾಬ್ ಕಾರ್ಡ್ ವ್ಯಾಲಿಡೇಶನ್ ಅಭಿಯಾನದ ಮಾದರಿಯಲ್ಲಿ ಅತೀ ತುರ್ತಾಗಿ ಇ-ಕೆವೈಸಿ ಮುಖಾಂತರ ಪೂರ್ಣಗೊಳಿಸಲು ಸೂಚಿಸಿದ್ದಾರೆ. ಎಂದು ತಿಳಿಸಿದ್ದಾರೆ. ನರೇಗಾ ಯೋಜನೆಯಡಿ ನೋಂದಾಯಿತ ಕೂಲಿಕಾರರಲ್ಲಿ ಸಕ್ರಿಯ ಕೂಲಿಕಾರರ ಮಾಹಿತಿಯನ್ನು ಎನ್ ಎಂಎಂಎಸ್ ಮೊಬೈಲ್ ತಂತ್ರಾಂಶದಲ್ಲಿ ಇ-ಕೆವೈಸಿ ಮಾಡುವ ಬಗ್ಗೆ ಈಗಾಗಲೇ ಎಲ್ಲ ಗ್ರಾಮ ಪಂಚಾಯಿತಿ, ಗ್ರಾಮ ಮಟ್ಟದಲ್ಲಿ ಜನರಿಗೆ ಅರಿವು ಮೂಡಿಸಲಾಗುತ್ತಿದೆ.
ಶಿರಹಟ್ಟಿ ತಾಲೂಕ ಪಂಚಾಯತ ಸಭಾಂಗಣದಲ್ಲಿ ಶಿರಹಟ್ಟಿ ತಾಲೂಕುಗಳ ಗ್ರಾಮ ಪಂಚಾಯತ ಕಾರ್ಯದರ್ಶಿಗಳು, ಕರ ವಸೂಲಿಗಾರರು, ಮನರೇಗಾ ಸಿಬ್ಬಂದಿಗಳಾದ ಜಿಕೆಎಂ, ಬಿಎಫ್ಟಿ, ಇಂಜಿನಿಯರ್ಗಳು ಮತ್ತು NRLM ಸಿಬ್ಬಂದಿಗಳಿಗೆ ಸಭೆಯಲ್ಲಿ ಅವರು ಮಾತನಾಡಿದರು.
“ಮನರೇಗಾ ಯೋಜನೆಯ ಸಕ್ರಿಯ ಕೂಲಿಕಾರರ ಜಾಬ್ ಕಾರ್ಡ್ ಗಳನ್ನು ಇ-ಕೆವೈಸಿ ಮೂಲಕ ಪರಿಶೀಲಿಸುವ ಕಾರ್ಯವು ತುರ್ತಾಗಿ ನಡೆಯುತ್ತಿದೆ. ಎಲ್ಲಾ ಗ್ರಾಮ ಪಂಚಾ ಯಿತಿಗಳಲ್ಲಿ ಸಕ್ರಿಯ ಕುಟುಂಬಗಳ ಜಾಬ್ ಕಾರ್ಡ್ ವ್ಯಾಲಿಡೇಶನ್ ಅನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು.” ಎಂದು ಒತ್ತಿ ಹೇಳಿದರು.
ಮನರೇಗಾ ಯೋಜನೆಯಡಿ ನೋಂದಾಯಿತ ಕೂಲಿಕಾರರ ಮಾಹಿತಿಯನ್ನು ಎನ್ಎಂಎಂಎಸ್ (ನರೇಗಾ ಮೊಬೈಲ್ ಮಾನಿಟರಿಂಗ್ ಸಿಸ್ಟಮ್) ತಂತ್ರಾಂಶದಲ್ಲಿ ಇ-ಕೆವೈಸಿ ಮೂಲಕ ಅಪ್ಡೇಟ್ ಮಾಡಲಾಗುತ್ತಿದೆ. ಈಗಾಗಲೇ ಗ್ರಾಮ ಮಟ್ಟದಲ್ಲಿ ಜನರಿಗೆ ಈ ಕುರಿತು ಜಾಗೃತಿ ಮೂಡಿಸಲಾಗಿದ್ದು, ಶಿರಹಟ್ಟಿ ತಾಲೂಕುಗಳ ನರೇಗಾ ಶಾಖೆಯ ಐಇಸಿ ವಿಭಾಗವು ತಯಾರಿಸಿದ ಧ್ವನಿ ಮುದ್ರಿಕೆಯನ್ನು ಕಸ ಸಂಗ್ರಹ ವಾಹನಗಳ ಮೂಲಕ ಪ್ರಸಾರ ಮಾಡಲು ಸೂಚಿಸಲಾಗಿದೆ.
ಇನ್ನು ಗ್ರಾಮ ಪಂಚಾಯಿತಿ ಮಟ್ಟದ ಸಿಬ್ಬಂದಿಗಳಿಗೆ ಇ-ಕೆವೈಸಿ ಅಪ್ಡೇಟ್ ಕಾರ್ಯಕ್ಕೆ ತರಬೇತಿ ನೀಡಲಾಗಿದ್ದು, ಈ ಮೂಲಕ ಪ್ರಗತಿ ಸಾಧಿಸಲು ಸೂಚನೆ ನೀಡಲಾಗಿದೆ. ಆದರೆ, ಕೆಲವು ಗ್ರಾಮಗಳಲ್ಲಿ ಕೂಲಿಕಾರರು ವೈಯಕ್ತಿಕ ಕೆಲಸಕ್ಕಾಗಿ ಮನೆಯಿಂದ ಹೊರಗಡೆ ಇರುವುದರಿಂದ, ಮನೆ-ಮನೆ ಭೇಟಿಯ ಸಂದರ್ಭದಲ್ಲಿ ಮೇಟ್ ಗಳು ಅಥವಾ ನರೇಗಾ ಸಿಬ್ಬಂದಿಗೆ ಅವರು ಲಭ್ಯವಾಗದಿರುವುದು ಇ-ಕೆವೈಸಿ ಪ್ರಕ್ರಿಯೆ ನಿಧಾನ ಗೊಳಿಸಿದೆ. ಇದರಿಂದ ಭವಿಷ್ಯದಲ್ಲಿ ಕೂಲಿ ಕಾರರಿಗೆ ಕೆಲಸ ನೀಡುವಾಗ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಕಾರ್ಯ ನಿರ್ವಾಹಕ ಅಧಿಕಾರಿ ಎಚ್ಚರಿಕೆ ನೀಡಿದರು.
ಗ್ರಾಮ ಪಂಚಾಯಿತಿಗಳಲ್ಲಿ ಇ-ಕೆವೈಸಿ ಪ್ರಕ್ರಿಯೆಯನ್ನು ಉಚಿತವಾಗಿ ನಡೆಸಲಾಗುತ್ತಿದ್ದು, ಮೇಟ್ಗಳ ಮೂಲಕವೂ ಈ ಸೌಲಭ್ಯವನ್ನು ಪಡೆಯಬಹುದು. “ಇ-ಕೆವೈಸಿ ಯೋಜನೆಯು ಮನರೇಗಾ ಕಾರ್ಯ ಕ್ರಮದ ಪಾರದರ್ಶಕ ಅನುಷ್ಠಾನಕ್ಕೆ ಮಹತ್ವದ ಹೆಜ್ಜೆ ಯಾಗಿದೆ. ಆದ್ದ-ರಿಂದ, ಎಲ್ಲಾ ಕೂಲಿಕಾರರು ಮತ್ತು ಕಾಯಕ ಬಂಧುಗಳು ಕಡ್ಡಾಯವಾಗಿ ಇ-ಕೆವೈಸಿ ಅಪ್ಡೇಟ್ ಮಾಡಿಸಿ ಕೊಳ್ಳಬೇಕು,” ಎಂದು ಒತ್ತಾಯಿಸಿದರು.
ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯಿತಿಯ ಪಿಡಿಓ, ಕಾರ್ಯ ದರ್ಶಿ, ಡಿಇಒ, ಬಿಎಫ್ಟಿ, ಜಿಕೆ-ಎಂ ಅವರನ್ನು ಸಂಪರ್ಕಿಸಲು ಸಿಬ್ಬಂದಿಗಳಿಗೆ ಸೂಚಿಸಲಾಗಿದೆ. ಈ ಅಭಿಯಾನ ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕೆಂದು ಸಭೆಯಲ್ಲಿ ಕರೆ ನೀಡಲಾಯಿತು.