ಗದಗ, ಆಗಸ್ಟ್ 9,ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಸೌತ್ ಕೋರಿಯಾದ ವಿಶ್ವ ಶಾಂತಿ ಸಂಸ್ಥೆ HWPL ಪ್ರತಿನಿಧಿಗಳು ವಿಶ್ವವಿದ್ಯಾಲಯದ ಭೇಟಿ ಅಂಗವಾಗಿ ಶನಿವಾರ ಮಾನ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಡಾ. ಎಚ್. ಕೆ. ಪಾಟೀಲ ಅವರನ್ನು ಭೇಟಿ ಮಾಡಿ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ HWPL ಗ್ಲೋಬಲ್–O3 ಶಾಖೆಯ ಶಾಖಾ ವ್ಯವಸ್ಥಾಪಕರಾದ ಶ್ರೀ ವೂನಮ್ ಕಿಮ್ ಹಾಗೂ ಅಂತರರಾಷ್ಟ್ರೀಯ ಕಾನೂನು ಇಲಾಖೆಯ ನಿರ್ದೇಶಕರಾದ ಶ್ರೀ ಜೇಡೆನ್ ಲೀ ಅವರು ಸಂಸ್ಥೆಯ ಜಾಗತಿಕ ಶಾಂತಿ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಜೊತೆಗೆ, ಗದಗ ಜಿಲ್ಲೆಯನ್ನು “ಶಾಂತಿ ಜಿಲ್ಲೆ” ಹಾಗೂ ಕರ್ನಾಟಕ ರಾಜ್ಯವನ್ನು “ಶಾಂತಿ ರಾಜ್ಯ”ವಾಗಿ ಘೋಷಿಸಲು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರಾದ ಡಾ. ಎಚ್. ಕೆ. ಪಾಟೀಲ ಅವರು, “ಗದಗ ಜಿಲ್ಲೆ ಬಹುಕಾಲದಿಂದ ಶಾಂತಿಯುತ ಜಿಲ್ಲೆ ಎಂಬ ಖ್ಯಾತಿ ಪಡೆದಿದೆ. ಕರ್ನಾಟಕವೂ ದೇಶದಲ್ಲೇ ಶಾಂತಿಯುತ ರಾಜ್ಯವಾಗಿ ಹೆಸರಾಗಿದೆ. HWPL ಸಂಸ್ಥೆಯ ಮನವಿಯನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.
ಅವರು ಮುಂದುವರೆದು, “ಜನರು ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ವಿಶ್ವ ಶಾಂತಿ ಅತ್ಯವಶ್ಯಕ. ಭಾರತವು ಅಹಿಂಸಾ ತತ್ವದ ಮೂಲಕ ವಿಶ್ವಕ್ಕೆ ದಾರಿದೀಪವಾಗಿದ್ದು, ಮಹಾತ್ಮ ಗಾಂಧೀಜಿಯವರ ತತ್ವವನ್ನು ಅನೇಕ ರಾಷ್ಟ್ರಗಳು ಅನುಸರಿಸಬೇಕು” ಎಂದು ತಿಳಿಸಿದರು.
ಈ ಸಂವಾದದಲ್ಲಿ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಾ. ಸುರೇಶ ವಿ. ನಾಡಗೌಡರ ಮತ್ತು ಪ್ರಾಧ್ಯಾಪಕರು, ವಿಶ್ವವಿದ್ಯಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು.