ಗದಗ : ಡಿಸೆಂಬರ್ 30: ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆ ವಂಚನೆಗಳ ರೀತಿಗಳು ಸಹ ಬದಲಾಗುತ್ತಿವೆ. ಈಗ ಸೈಬರ್ ಕ್ರೈಂ ಹಾವಳಿ ಹೆಚ್ಚಾಗಿದೆ. ಹೊಸ ವರ್ಷವನ್ನು ಗಮನದಲ್ಲಿಟ್ಟುಕೊಂಡ ವಂಚಕರು ಈಗ ಜನರ ಖಾತೆಯನ್ನು ಖಾಲಿ ಖಾಲಿ ಮಾಡಲು ಹೊಸ ತಂತ್ರವನ್ನು ರೂಪಿಸಿದ್ದಾರೆ.
ಈ ಕುರಿತು ಪೊಲೀಸರು ಜನರಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ. ಯಾವುದೇ ಸೈಬರ್ ಕ್ರೈಂ ಅಪರಾಧಕ್ಕೆ ಒಳಗಾದಲ್ಲಿ ಕೂಡಲೇ 1930 ಸಂಖ್ಯೆಗೆ ಕರೆ ಮಾಡಿ ಎಂದು ಮನವಿ ಮಾಡಿದ್ದಾರೆ.
ಹೊಸ ವರ್ಷ ಸಂಭ್ರಮಿಸಲು ಜನರು ತಯಾರಿ ನಡೆಸುತ್ತಿದ್ದಾರೆ. ಇದನ್ನೇ ಸೈಬರ್ ಕ್ರೈಂ ವಂಚಕರು ಬಂಡವಾಳ ಮಾಡಿಕೊಂಡಿದ್ದಾರೆ. ಹೊಸ ವರ್ಷದ ಗ್ರೀಟಿಂಗ್ ಕಾರ್ಡ್, ಶುಭಾಶಯಗಳ ಹೆಸರಿನಲ್ಲಿ ಲಿಂಕ್ಗಳನ್ನು ಕಳಿಸಿ ಹಣವನ್ನು ದೋಚಲಿದ್ದಾರೆ ಎಂದು ಎಚ್ಚರಿಕೆ ನೀಡಲಾಗಿದೆ.
ನ್ಯೂ ಇಯರ್ ಗ್ರೀಟಿಂಗ್ ಹೆಸರಿನಲ್ಲಿ ಸೈಬರ್ ವಂಚನೆ ಕುರಿತು ಎಚ್ಚರ. ಹೊಸ ವರ್ಷವನ್ನು ಆನಂದದಿಂದ ಆಚರಿಸಿ ಎಂದು ಸೈಬರ್ ವಂಚಕರು ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಫೇಸ್ಬುಕ್, ಟೆಲಿಗ್ರಾಮ್ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಲಿಂಕ್ಗಳು ಗ್ರೀಟಿಂಗ್ಸ್ಗಳನ್ನು ಕಳುಹಿಸಿ ಸೈಬರ್ ವಂಚನೆಗೆ ಒಳಗಾಗುವಂತೆ ಮಾಡುತ್ತಾರೆ ಎಂದು ಪೊಲೀಸರು ಹೇಳಿದ್ದಾರೆ. ಎಚ್ಚರವಾಗಿರಿ, ಅಪರಿಚಿತ, ಅನುಮಾನಾಸ್ಪದ ಲಿಂಕ್ಗಳ ಮೇಲೆ ಕ್ಲಿಕ್ ಮಾಡಬೇಡಿ ಎಂದು ತಿಳಿಸಿದ್ದಾರೆ.
ಜನರು ಹೇಗೆ ಎಚ್ಚರ ವಹಿಸಬೇಕು?
* ಹೊಸ ವರ್ಷದ ಶುಭಾಶಯ ಹಾನಿಕಾರಕ ಲಿಂಕ್ ಮತ್ತು APK ಫೈಲ್ ಕುರಿತು ಎಚ್ಚರವಾಗಿರಿ
* ಹೊಸ ವರ್ಷದ ಸಂದರ್ಭವನ್ನು ಬಳಸಿಕೊಂಡು ಸೈಬರ್ ಕ್ರಿಮಿನಲ್ಗಳು ಲಿಂಕ್ ಕಳಿಸುತ್ತಾರೆ
* ಮೊಬೈಲ್ಗೆ ಹಾನಿಕಾರಕ ಲಿಂಕ್ ಮತು APK ಫೈಲ್ ಕಳುಹಿಸಿ ಹ್ಯಾಕ್ ಮಾಡುವ ಸಾಧ್ಯತೆ
* ಹ್ಯಾಕ್ ಮಾಡಿದ ಮೊಬೈಲ್ನಿಂದ ವಾಟ್ಸಾಪ್ ಸೇರಿ ಸಾಮಾಜಿಕ ಜಾಲತಾಣ ಮೂಲಕ ಲಿಂಕ್ ಮತ್ತು APK ಫೈಲ್ ಶೇರ್ ಮಾಡುವ ಸಾಧ್ಯತೆ ಇರುತ್ತದೆ.
* ಸಾರ್ವಜನಿಕರು ಈ ರೀತಿಯ ಹೊಸ ವರ್ಷದ ಶುಭಾಶಯ ಕೋರುವ ಯಾವುದೇ ಹಾನಿಕಾರಕ ಲಿಂಕ್ಗಳು ಮತ್ತು APK ಫೈಲ್ಗಳನ್ನು ವಾಟ್ಸಾಪ್ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣದಿಂದ ಸ್ವೀಕರಿಸಿಕೊಂಡಲ್ಲಿ ಅದನ್ನು ತಕ್ಷಣ ಡಿಲೀಟ್ ಮಾಡಿರಿ.
* ಯಾವುದೇ ಕಾರಣಕ್ಕೂ ಈ ಮಾದರಿ ಹಾನಿಕರ ಲಿಂಕ್ ಮತ್ತು APK ಫೈಲ್ಗಳನ್ನು ಯಾರಿಗೂ ಶೇರ್ ಮಾಡದಿರಿ.
* ಹಾನಿಕಾರಕ ಲಿಂಕ್ ಮತ್ತು APK ಫೈಲ್ಗಳನ್ನು ಯಾವುದಾದರೂ ವಾಟ್ಸಾಪ್ ಗ್ರೂಪ್ಗಳಿಗೆ ನಿಮ್ಮ ಪರಿಚಿತ ವಾಟ್ಸಾಪ್ ಸಂಖ್ಯೆಯಿಂದಲೇ ಪೋಸ್ಟ್ ಮಾಡಿದಲ್ಲಿ ಗ್ರೂಪ್ ಅಡ್ಮಿನ್ ಅಂತಹ ಲಿಂಕ್ ಮತ್ತು APK ಫೈಲ್ಗಳನ್ನು ಪರಿಶೀಲನೆ ಮಾಡಿ ಡಿಲೀಟ್ ಮಾಡಿ
ಯಾವುದೇ ಸೈಬರ್ ಕ್ರೈಂ ಅಪರಾಧಕ್ಕೆ ಒಳಗಾದಲ್ಲಿ ಕೂಡಲೇ 1930 ಸಂಖ್ಯೆಗೆ ಕರೆ ಮಾಡಿ ಅಥವಾ www.cybercrime.gov.in ಈ ವೆಬ್ ಸೈಟ್ನಲ್ಲಿ ದೂರನ್ನು ದಾಖಲಿಸಿ ಎಂದು ಪೊಲೀಸರು ಹೇಳಿದ್ದಾರೆ.
ಡಿಜಿಟಲೀಕರಣ ಯುಗದಲ್ಲಿ ಸೈಬರ್ ಕ್ರೈಂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೈಬರ್ ಕ್ರೈಂ ತಡೆಯುವ ಕುರಿತು ಜನರು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಸೈಬರ್ ಅಪರಾಧಗಳಿಂದ ಉಂಟಾಗುವ ದುಷ್ಪಾರಿಣಾಮಗಳ ಬಗ್ಗೆ ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ವಹಿಸಬೇಕಿದೆ. ಈ ಕುರಿತು ಪೊಲೀಸ್ ಇಲಾಖೆ ಸಹ ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿದೆ.
ಸಾಮಾಜಿಕ ತಾಣಗಳು ಎಷ್ಟು ಒಳಿತಾಗಿದೆಯೋ, ಅಷ್ಟೇ ಕೆಡುಕು ಸಹ ಇದೆ. ಕ್ಯೂಆರ್ ಕೋಡ್ ನಿರ್ವಹಿಸುವಾಗ ಬಹಳ ಮುನ್ನೆಚ್ಚರಿಕೆ ವಹಿಸಬೇಕು. ಜಿ-ಮೇಲ್, ಫೇಸ್ಬುಕ್, ಟ್ವಿಟರ್ ಕಡ್ಡಾಯವಾಗಿ ಸೈನ್ಔಟ್ ಮಾಡಬೇಕು. ಮೊಬೈಲ್ ಮತ್ತು ಲ್ಯಾಪ್ಟಾಪ್ಗಳ ಮೂಲಕ ವಂಚನೆ ಮಾಡಲಾಗುತ್ತಿದೆ. ವಿವಿಧ ಅಪ್ಲಿಕೇಷನ್ ಮೂಲಕವೂ ವಂಚನೆ ಮಾಡಲಾಗುತ್ತಿದೆ. ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಅಪ್ಲಿಕೇಶನ್ ಸುರಕ್ಷತೆಯ ಕುರಿತು
ಸಹ ಹೆಚ್ಚಿನ ಜಾಗೃತೆ ವಹಿಸಬೇಕಿದೆ.