ಉದ್ಯೋಗಕ್ಕಾಗಿ ಅವಕಾಶ ಸೃಷ್ಟಿ ಮಾಡುವುದು ನಮ್ಮ ಗುರಿ
ಗದಗ. ನ.01 : ಕೈಗಾರಿಕೆಗಳತ್ತ ನಮ್ಮ ಚಿತ್ತ ಕೇಂದ್ರಿಕರಣವಾಗಬೇಕಾಗಿದೆ. ಆಗ ಮಾತ್ರ ಉದ್ಯೋಗ ಅರಸಿಕೊಂಡು ವಲಸೆ ಹೋಗುವುದನ್ನು ತಪ್ಪಿಸಬಹುದಾಗಿದೆ. ಮಹಿಳೆಯರ ಉದ್ಯೋಗಕ್ಕಾಗಿಯೂ ಜಿಲ್ಲೆಯಲ್ಲಿ ವಿಶೇಷ ಪ್ರಯತ್ನಗಳಾಗಬೇಕಾಗಿದೆ. ಇರುವ ನೆಲೆಯಲ್ಲಿಯೇ ಉದ್ಯೋಗಕ್ಕಾಗಿ ಅವಕಾಶ ಸೃಷ್ಟಿ ಮಾಡುವುದು ನಮ್ಮ ಗುರಿ ಎಂದು ಸಚಿವ ಎಚ್.ಕೆ.ಪಾಟೀಲ ಅವರು ನುಡಿದರು.
ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಏರ್ಪಡಿಸಲಾದ ಕನ್ನಡ ರಾಜ್ಯೋತ್ಸವದ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಮೂಲಭೂತ ಸೌಲಭ್ಯಗಳ ಸೃಷ್ಟಿ ನಮ್ಮ ಸವಾಲು. ಅವುಗಳಲ್ಲಿ ಮನೆಗಳ ನಿರ್ಮಾಣ ಗದಗ ಜಿಲ್ಲೆ ವ್ಯವಹಾರ, ವಾಣಿಜ್ಯ, ಸಂಸ್ಕöÈತಿ, ವಸ್ತು ಪ್ರದರ್ಶನಗಳ ಕೇಂದ್ರ ಸ್ಥಾನವನ್ನಾಗಿ ನಿರ್ಮಾಣ ಮಾಡುವುದು ಸೇರಿದಂತೆ ರೈತರ ಆದಾಯವನ್ನು ಇಮ್ಮಡಿ-ಮುಮ್ಮಡಿಯಾಗಿಸಿ ರೈತರನ್ನು ಶೋಷಣೆಯಿಂದ ಮುಕ್ತರನ್ನಾಗಿಸಿ ವೈಜ್ಞಾನಿಕ ಬದಲಾವಣೆಗೆ ಹೆಜ್ಜೆಯನ್ನಿರಿಸಿಬೇಕಾಗಿದೆ ಎಂದು ತಿಳಿಸಿದರು.
ಮಹಿಳೆಯರಿಗೆ ಅವರ ಸುತ್ತಲಿನ ಜಗತ್ತನ್ನು ಪರಿಚಯಸಿದ ‘ಶಕ್ತಿಯೋಜನೆ’, ಹಸಿವು ಮುಕ್ತ ಕರ್ನಾಟಕ ಮಾಡುವ ದೃಢ ಸಂಕಲ್ಪದೊAದಿಗೆ ಅನುಷ್ಠಾನಕ್ಕೆ ಬಂದ ‘ಅನ್ನಭಾಗ್ಯ ಯೋಜನೆ’, ಉಚಿತ ಬೆಳಕು ಸುಸ್ಥಿರ ಬದುಕು, ಸರ್ವರನ್ನು ಒಳಗೊಂಡ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಪರ ಅಭಿವೃದ್ಧಿಯ ಸಂಕೇತವಾದ ‘ಗೃಹಜ್ಯೋತಿ ಯೋಜನೆ’, ದೇಶದಲ್ಲಿಯೇ ಅತಿ ದೊಡ್ಡ ಆರ್ಥಿಕ ಭದ್ರತಾ ಯೋಜನೆಯಾದ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಕಾರಣವಾದ ‘ಗೃಹಲಕ್ಷಿ÷್ಮÃ ಯೋಜನೆ’, ಪದವಿ ಹಾಗೂ ಡಿಪ್ಲೋಮಾ ವಿದ್ಯಾಭ್ಯಾಸ ಪೂರ್ಣಗೊಳಿಸಿ ಉದ್ಯೋಗದ ಹುಡುಕಾಟದಲ್ಲಿ ತೊಡಗಿರುವ ಯುವ ಜನರಿಗೆ ಗರಿಷ್ಟ ಎರಡು ವರ್ಷಗಳವರೆಗೆ ನಿರುದ್ಯೋಗ ಭದ್ರತೆ ಒದಗಿಸುವ’ಯುವನಿಧಿ ಯೋಜನೆ’ ಗಳು ರಾಜ್ಯದಲ್ಲಿ ಪ್ರತಿಶತ 99 ರಷ್ಟು ಫಲಾನುಭವಿಗಳಿಗೆ ತಲುಪಿದ್ದು ನಮ್ಮೆಲ್ಲರಿಗೆ ನೆಮ್ಮದಿ ಮೂಡಿಸಿದೆ. ರಾಜ್ಯದಲ್ಲಿ ಇಂದು 1 ಕೋಟಿಗೂ ಅಧಿಕ ಬಡತನ ರೇಖೆಗಿಂತ ಕೆಳಗಿರುವ ಜನರನ್ನು ಮೇಲೆತ್ತುವ ಕಾರ್ಯದಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ ಎಂಬುದು ಅಭಿಮಾನದ ಸಂಗತಿ ಎಂದರು
ರಾಜ್ಯದಲ್ಲಿ ಬಡವರನ್ನು ಮೇಲ್ಮಟ್ಟಕ್ಕೇರಿಸುವ ಮೂಲಕ ಕ್ರಾಂತಿಕಾರಕ ಕೆಲಸ ಮಾಡಿದ ಹೆಗ್ಗಳಿಕೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ್ದು. ಪಂಚ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ನಿರಂತರ ಶ್ರಮಿಸುವದರ ಮೂಲಕ ನುಡಿದಂತೆ ನಡೆದಿದ್ದೇವೆ. ಬಡವರ ಕಲ್ಯಾಣ ಕೆಲಸಗಳಿಗೆ ನಮ್ಮ ಸರ್ಕಾರ ಸದಾಕಾಲ ಕಂಕಣ ಬದ್ಧವಾಗಿದೆ ಎಂದು ನುಡಿದರು.
ಗದಗ ಜಿಲ್ಲೆಯ ಭೀಷ್ಮ ಕೆರೆ ಪ್ರವಾಸಿ ತಾಣದಲ್ಲಿ ರೂ. 62 ಲಕ್ಷಗಳ ಅಂದಾಜು ವೆಚ್ಚದಲ್ಲಿ ವರ್ಗ ಎ ಮಾದರಿಯ ‘ಪ್ರವಾಸಿ ಸ್ನೇಹಿ ಸಂಕಿರ್ಣ’ ನಿರ್ಮಿಸಲು ಅನುದಾನ ಬಿಡುಗಡೆ ಮಾಡಲಾಗಿದೆ. ಗದಗ ತಾಲ್ಲೂಕಿನ ಸೊರಟೂರು ವಲಯದ ಕಪ್ಪತ್ತಗುಡ್ಡದ ಅರಣ್ಯ ಪ್ರದೇಶದಲ್ಲಿ ಅಂದಾಜು ರೂ. 850 ಲಕ್ಷಗಳಲ್ಲಿ ‘ಜಂಗಲ್ ಲಾಡ್ವಸ್ ಮತ್ತು ರೆಸಾರ್ಟ್’ ನಿರ್ಮಿಸಲು ಭೂಮಿ ಪೂಜೆ ಮಾಡಲಾಗಿದೆ. ಗದಗ ಶಹರದಲ್ಲಿ ತ್ರೀ ಸ್ಟಾರ್ ಹೋಟೆಲ್ ಕಾಮಗಾರಿಗೆ 9 ಕೋಟಿ, ಕ್ಯಾಟರಿಂಗ್ ಹಾಸ್ಪಿಟ್ಯಾಲಿಟಿ ಮತ್ತು ಹೋಟೆಲ್ ಮ್ಯಾನೇಜ್ಮೆಂಟ್ ಸಂಸ್ಥೆ ನಿರ್ಮಾಣಕ್ಕೆ 8 ಕೋಟಿ, ಮಹಾಲಿಂಗಪುರ ಗ್ರಾಮದ ಕಪ್ಪತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮ ಶಿಬಿರಕ್ಕೆ 7 ಕೋಟಿ, ಲಕ್ಕುಂಡಿ ಗ್ರಾಮದ 13 ದೇವಸ್ಥಾನದ ಪುನರುಜ್ಜಿವನ ಕಾಮಗಾರಿಗೆ 5 ಕೋಟಿ, ಬಿಂಕದಕಟ್ಟಿಯ ಮೃಗಾಲಯ ನೈಟ್ ಸಫಾರಿಗೆ 4 ಕೋಟಿ, ತಿರಂಗಾ ಪಾರ್ಕ ಪ್ರದರ್ಶನ ಕಾಮಗಾರಿಗೆ 3 ಕೋಟಿ, ಭೀಷ್ಮ ಕೆರೆ ಮತ್ತು ಮೃಗಾಲಯದಲ್ಲಿ ಪುಟಾಣಿ ರೈಲು ಕಾಮಗಾರಿಗೆ 3 ಕೋಟಿ, ಕೊಣ್ಣೂರ ಸಮುದಾಯ ಭವನ ನಿರ್ಮಾಣಕ್ಕೆ 1 ಕೋಟಿ, ಜಿಗಳೂರು ಕೆರೆ ಹತ್ತಿರ ಪ್ರವಾಸಿ ಉದ್ಯಾನವನ ನಿರ್ಮಾಣಕ್ಕೆ 50 ಲಕ್ಷ ರೂ ಸೇರಿದಂತೆ ವಿವಿಧ ಒಟ್ಟು 24 ಕಾಮಗಾರಿಗಳಿಗೆ 50.85 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿವೆ ಎಂದರು.
ಮುಖ್ಯಮಂತ್ರಿಗಳ ವಿಶೇಷ ಅನುದಾನ ಯೋಜನೆಯಡಿ ಗದಗ ನರಗುಂದ ಮತಕ್ಷೇತ್ರಕ್ಕೆ 53 ಕಾಮಗಾರಿಗಳಿಗೆ 11.55 ಕೋಟಿ ಅನುದಾನ ಮಂಜೂರಾಗಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 7 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಜಿಲ್ಲಾ ಕ್ರೀಡಾಂಗಣ ಹಾಗೂ ಒಳಾಂಗಣ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿಗಳಿಗಾಗಿ ಅನುದಾನ ಬಿಡುಗಡೆ ಮಾಡಲಾಗಿದ್ದು ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿವೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ವಿಶ್ವವಿದ್ಯಾಲಯದ ಆವರಣದಲ್ಲಿರುವ ಸಬರಮತಿ ಆಶ್ರಮದ ಪಕ್ಕದಲ್ಲಿ ಯುವಕರಲ್ಲಿ ಚೈತನ್ಯ ಮತ್ತು ಸ್ಫೂರ್ತಿ ತುಂಬುವ ಆಕಾಂಕ್ಷೆಯಿಂದ ಮುವತ್ತರೊಂಬತ್ತುವರೆ 39 ಅಡಿ ಎತ್ತರದ ವಿವೇಕಾನಂದರ ಕಂಚಿನ ಪ್ರತಿಮೆ ಸ್ಥಾಪನೆ ಮಾಡಲಾಗಿದೆ ಎಂದರು.
ಗದಗ ತಾಲೂಕಿನ ಕಾರವಾರ ಕೈಗಾ ಇಳಕಲ್ ರಾಜ್ಯ ಹೆದ್ದಾರಿ 6ಕ್ಕೆ ಹೊಂದಿಕೊAಡಿರುವ ನಾಗಾವಿ ಕ್ರಾಸ್ದಿಂದ ಮುಳಗುಂದ ರಸ್ತೆ 25 ಕೋಟಿ ರೂ. ಗಳಲ್ಲಿ, ನರಗುಂದ ತಾಲೂಕಿನ ಬೀಡಿ ಬೆಳವಣಕಿ ರಾಜ್ಯ ಹೆದ್ದಾರಿ 56, ಬೆಳವಣಕಿ ಕ್ರಾಸ್ದಿಂದ ಜಿಲ್ಲಾ ಗಡಿಯವರೆಗೆ 10 ಕೋಟಿ, ರೋಣ ತಾಲೂಕಿನ ಮುನವಳ್ಳಿ ಕೋಟುಮಚಗಿ ರಾಜ್ಯ ಹೆದ್ದಾರಿ 83ರಲ್ಲಿ ರೋಣ ಪಟ್ಟಣ ಪರಿಮಿತಿಯಿಂದ ಹೊಳೆಆಲೂರ ರಸ್ತೆಯವರೆಗೆ ರೂ. 20 ಕೋಟಿ, ಶಿರಹಟ್ಟಿ ತಾಲೂಕಿನ ಕಲ್ಕಲಾ ಶಿಗ್ಗಾಂವ ರಾಷ್ಟಿçÃಯ ಹೆದ್ದಾರಿ ಹುಲ್ಲೂರ ಕ್ರಾಸ್ದಿಂದ ಸೂರಣಗಿ ಗ್ರಾಮದವರೆಗೆ 10 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.
ಜಿಮ್ ಕಾಮಗಾರಿಗಳು ನೂತನ ಡಯಾಲಿಸಿಸ್ ಘಟಕ ಉದ್ಘಾಟನೆ ಮಾಡಲಾಗಿದೆ. 20 ಕೋಟಿ ರೂಪಾಯಿಗಳ 50 ಹಾಸಿಗೆಗಳ ತೀವ್ರ ನಿಗಾ ಘಟಕಕ್ಕೆ ಹಾಗೂ ಜಿಲ್ಲಾ ಸಮಗ್ರ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು.
ಗಾಂಧೀ ಭಾರತ : ಬೆಳಗಾವಿಯ ಕಾಂಗ್ರೆಸ್ ಅಧಿವೇಶನಕ್ಕೆ ನೂರರ ಸಂಭ್ರಮ ಸಲುವಾಗಿ ಬೆಳಗಾವಿಯಲ್ಲಿ 1924ರಲ್ಲಿ ಮಹಾತ್ಮಾ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿವೇಶನ ಜರುಗಿತ್ತು. ಮಹಾತ್ಮಾ ಗಾಂಧೀಜಿ ಅವರು ಅಧ್ಯಕ್ಷತೆ ವಹಿಸಿದ ಏಕೈಕ ಅಧಿವೇಶನ ಇದಾಗಿದೆ. ನೂರರ ಸಂಭ್ರಮದ ಸಂದರ್ಭದಲ್ಲಿ ಅದರ ನೆನಪನ್ನು ಮರುಸ್ಥಾಪಿಸಲು ಕರ್ನಾಟಕ ಸರ್ಕಾರ ‘ಗಾಂಧೀ ಭಾರತ’ ಹೆಸರಡಿಯಲ್ಲಿ ರಾಜ್ಯದಾದ್ಯಂತ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಜನತಾ ದರ್ಶನ : ಜಿಲ್ಲೆಯ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಗದಗ ಜಿಲ್ಲೆಯಲ್ಲಿ ಮುಂಡರಗಿ ತಾಲ್ಲೂಕನ್ನೊಳಗೊಂಡು ಈಗಾಗಲೇ 3 ಬಾರಿ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಂಡು ಹಲವಾರು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರಗಳನ್ನು ಘೋಷಿಸಿ ಸಾರ್ವಜನಿಕರ ಅಹವಾಲುಗಳಿಗೆ ಸೂಕ್ತ ಸ್ಪಂದನೆ ದೊರಕುವಂತೆ ಮಾಡಲಾಗಿದೆ. ಸಮಸ್ಯೆಗಳನ್ನು ಹೊತ್ತು ತಂದ ಸಾರ್ವಜನಿಕರ ಸಮಸ್ಯೆಗಳಿಗೆ ಹಾರಿಕೆ ಉತ್ತರ ನೀಡದೆ, ತಾರ್ಕಿಕ ಅಂತ್ಯ (ಲಾಜಿಕಲ್ ಎಂಡ್) ಕೊಟ್ಟು ಒಟ್ಟು 2154 ಅರ್ಜಿಗಳಲ್ಲಿ ಕೇವಲ 04 ಅರ್ಜಿಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲ ಅಹವಾಲುಗಳಿಗೆ ಪರಿಹಾರ ನೀಡಲಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ ಅವರು ಹೇಳಿದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಜಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ಲೇಖರಾಜ್ ಮೀನಾ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರುಗಳು, ಸಾರ್ವಜನಿಕರು, ಅಪಾರ ಸಂಖ್ಯೆಯಲ್ಲಿ ಶಾಲಾ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.