ಲಕ್ಕುಂಡಿ ಗ್ರಾಮ ಪಂಚಾಯತನಲ್ಲಿ ಗ್ರಾಮ ಸಭೆ
ಗದಗ ಅಕ್ಟೋಬರ್ 3 : ತಾಲ್ಲೂಕು ಪಂಚಾಯತಿ ವ್ಯಾಪ್ತಿಯ ಲಕ್ಕುಂಡಿ ಗ್ರಾಮದಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಜಿ ಗಳ ಜಯಂತಿಯನ್ನು ಆಚರಿಸಿ, 2025-26 ನೇ ಸಾಲಿನ ಕಾರ್ಮಿಕ ಆಯವ್ಯಯ ಹಾಗೂ ಕ್ರಿಯಾಯೋಜನೆ ತಯಾರಿಸುವ ಕುರಿತು ಗ್ರಾಮ ಸಭೆ ಜರುಗಿತು.
ಇದೇ ಸಂದರ್ಭದಲ್ಲಿ “ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ” ಅಭಿಯಾನಕ್ಕೆ ನರೇಗಾ ವ್ಯಯಕ್ತಿಕ ಕಾಮಗಾರಿ ಮಾಹಿತಿಯುಳ್ಳ ಕರಪತ್ರವನ್ನು ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಮಲ್ಲಯ್ಯ ಕೊರವನವರ ಬಿಡುಗಡೆಗೊಳಿಸಿ ಚಾಲನೆ ನೀಡಿ ಮಾತನಾಡಿ ಗ್ರಾಮೀಣ ಪ್ರದೇಶದ ಕುಟುಂಬಕ್ಕೆ ವರ್ಷದಲ್ಲಿ 100 ದಿನಗಳ ಕೆಲಸ ಖಾತರಿ, ಗಂಡು – ಹೆಣ್ಣಿಗೆ ಸಮಾನ ಕೂಲಿ ಪ್ರತಿ ದಿನಕ್ಕೆ -349, ಸರಕಾರ ನಿಗದಿ ಪಡಿಸಿದ ಕೆಲಸದ ಅಳತೆ ನಿಗದಿ ,ಒಂದು ದಿನದ ಕೂಲಿ ಪಡೆಯಲು ಮಾಡಬೇಕಾದ ಕೆಲಸದ ಪ್ರಮಾಣ ಮತ್ತು ಕೆಲಸದ ಅವಧಿ, ಯೋಜನೆಯಡಿಯಲ್ಲಿ ದೊರೆಯುವ ವಯಕ್ತಿಕ ಸೌಲಭ್ಯಗಳು ಮತ್ತು ಅರ್ಹತೆಗಳು, ಕಾಮಗಾರಿ ಪ್ರಮಾಣದಲ್ಲಿ ಹಿರಿಯ ನಾಗರಿಗರಿಗೆ ಮತ್ತು ವಿಶೇಷ ಚೇತನರಿಗೆ ಶೇ. 50 ರಷ್ಟು ರಿಯಾಯಿತಿ. ಕಾಮಗಾರಿ ಸ್ಥಳದಲ್ಲಿ ಒದಗಿಸಬೇಕಾದ ಸೌಲಭ್ಯಗಳು ಹಾಗೂ ಇತರೆ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾಮ ಪಂಚಾಯತ ಅಧ್ಯಕರಾದ ಕೆಂಚಪ್ಪ ಪೂಜಾರ ಮಾತನಾಡಿ ಗ್ರಾಮೀಣ ಪ್ರದೇಶದ ಜನರು ಪಟ್ಟಣಗಳಿಗೆ ಗುಳೆ ಹೋಗುವುದನ್ನು ತಪ್ಪಿಸಿ ನರೇಗಾದಡಿ ಕೆಲಸ ಪಡೆದು ತಮ್ಮೂರಲ್ಲೆ ನೆಲೆಸಬೇಕು. ಪ್ರತಿಯೊ ಬ್ಬರೂ 100 ಮಾನವ ದಿನಗಳ ಕೆಲಸ ಪಡೆಯಬೇಕು ಮತ್ತು ಪ್ರತಿ ವರ್ಷ ನರೇಗಾದಡಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಬೇಕು ಎಂದು ತಿಳಿಸಿದರು.
ಸಹಾಯಕ ನಿರ್ದೇಶಕ ಕುಮಾರ ಪೂಜಾರ ಮಾತನಾಡಿ ಪ್ರತಿಯೊಬ್ಬರು ನರೇಗಾ ಯೋಜನೆಯ ಸದುಪಯೋಗವನ್ನು ಪಡೆಯಬೇಕು. ನರೇಗಾ ಯೋಜನೆಯು ಕೃಷಿ ಇಲಾಖೆ, ತೋಟಗಾರಿಕೆ, ರೇಷ್ಮೆ ಮೀನುಗಾರಿಕೆ ಇಲಾಖೆಯಲ್ಲಿನ ಕಾಮಗಾರಿಗಳ ಸದುಪಯೋಗ ಪಡೆಯಬಹುದು. ಇನ್ನು ಮಹಿಳೆಯರು ಹೆಚ್ಚು ನರೇಗಾ ಯೋಜನೆಯಲ್ಲಿ ಭಾಗವಹಿಸಬೇಕು ಅದರ ಜೊತೆಗೆ ವ್ಯಯಕ್ತಿಕ ಕಾಮಗಾರಿಯನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಅವರು ಹೇಳಿದರು.